ವಚನಾನಂದ ಶ್ರೀಗೆ ಬಿಗ್ಶಾಕ್! ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಛಾಟನೆ! ಕಾರಣವೇನು?

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಅವರನ್ನು ಉಚ್ಚಾಟನೆ ಮಾಡಲಾಗಿದೆ.ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ 12 ಜನ ಧರ್ಮದರ್ಶಿಗಳಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಅವರನ್ನು ಪದಚ್ಯುತಿ ಮಾಡಿರುವ ಬಗ್ಗೆ ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಬಸವರಾಜ ದಿಂಡೂರ ಅವರು ಮಾಹಿತಿ ನೀಡಿದ್ದಾರೆ.
ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟಿ ಬಸವರಾಜ ದಿಂಡೂರ ಅವರು ನೀಡಿರುವ ಮಾಹಿತಿ ಪ್ರಕಾರ, ವಚನಾನಂದ ಶ್ರೀಗೆ ಶ್ವಾಸಪೀಠ ಅಥವಾ ಹರಿಹರ ಪಂಚಮಸಾಲಿ ಪೀಠದ ಪೈಕಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೇಳಿದ್ದರಂತೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡ ಕಾರಣವಾಗಿ ವಚನಾನಂದ ಶ್ರೀಯನ್ನು ಪದಚ್ಯುತಿ ಮಾಡಿದ್ದೇವೆ ಎಂದ ಬಸವರಾಜ ದಿಂಡೂರ ಹೇಳಿದ್ದಾರೆ.
ಟ್ರಸ್ಟಿಗಳ ಸಭೆ ಬಳಿಕ ಮಾಹಿತಿ ನೀಡಿರುವ ಟ್ರಸ್ಟಿ ಜಿ.ಪಿ.ಪಾಟೀಲ್, ಇದು ಟ್ರಸ್ಟ್ ವೈಯಕ್ತಿಕ ನಿರ್ಧಾರ ಅಲ್ಲ, ಸಮಾಜದ ನಿರ್ಧಾರ. ಸ್ವಾಮೀಜಿಗಳು ನಮ್ಮನ್ನು ಒಳಗೆ ಕರೆಯೋಕೆ ತಯಾರಿಲ್ಲ, ಶ್ವಾಸಗುರು ಪೀಠ ಬಿಡದೇ ಇರೋದು ಮುಖ್ಯ ಕಾರಣ. ಉಳಿದ ಕಾರಣ ಏನು ಎಂಬುದನ್ನು ಸದ್ಯದಲ್ಲೇ ಹೇಳುತ್ತೇವೆ ಎಂದು ಟ್ರಸ್ಟಿ ಜಿ.ಪಿ.ಪಾಟೀಲ್ ಹೇಳಿದ್ದಾರೆ.
ಸದ್ಯ ಈ ಸುದ್ದಿ ಬರೆಯುವ ತನಕ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ತನ್ನನ್ನು ಉಚ್ಚಾಟನೆ ಮಾಡಿರುವ ಬಗ್ಗೆ ವಚನಾನಂದ ಶ್ರೀ ಪ್ರತಿಕ್ರಿಯೆ ನೀಡಿಲ್ಲ. ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ 12 ಜನ ಧರ್ಮದರ್ಶಿಗಳು ತೆಗೆದುಕೊಂಡಿರುವ ಅಂತಿಮ ನಿರ್ಧಾರವನ್ನು ವಚನಾನಂದ ಶ್ರೀ ಒಪ್ಪುತ್ತಾರೋ? ಇಲ್ಲ ಅವರಿಗೆ ಪ್ರತ್ಯುತ್ತರ ನೀಡಿ ತನ್ನ ವಾದವನ್ನು ಮುಂದಿಡುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.
ಕೆಲವ ವಾರಗಳ ಹಿಂದಷ್ಟೇ ಕೂಡಲಸಂಗಮದಲ್ಲಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನಡೆಸುವ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಇದೀಗ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀಯನ್ನು ಅಮಾನತು ಮಾಡಿರೋದು ಭಕ್ತರಲ್ಲಿ ಗೊಂದಲದ ವಾತಾವರಣವನ್ನು ಮೂಡಿಸಿದೆ.
